ನನ್ನ ದೇಶದ ರಾಜಧಾನಿಯಲಿ
ಇನ್ನೊಂದು ಬಲಿದಾನ
ಹಾಡು ಹಗಲಿನ ಹೊತ್ತು
ಮುಗುಧ ಹಸುಳೆಯೊಂದು
ಕೊನೆ ಉಸಿರೆಳೆದಿತ್ತು.
ಊರೆಲ್ಲ ಮೊಂಬತ್ತಿ ಬೆಳಕು
ಹರಿದು ನ್ಯಾಯ ಬೇಡಿ
ಬರುವರನೇಕ ಜನ
ನಿನ್ನೆ ಇಂದು ನಾಳೆ ಮೊನ್ನೆಯ
ಕಂದಮ್ಮಗಳ ಸಾವಿಗೆ
ನ್ಯಾಯವೇ ಮೌನ.
ಸಾಯುತಿರುವವರು ಆರಯ್ಯ?
ಹಸುಳೆಗಳೆ, ಹೆತ್ತವರೆ, ಗುರು
ವರ್ಯರೆ, ಸಂಸ್ಕಾರದ ಸೋಂಕಿ
ಲ್ಲದೆ ಮೆರೆವ ಕಟುಕರೆ?
ಅಲ್ಲ, ಮಾನಸಿಕ ಅಸ್ವಸ್ಥರೆಂದು
ಘೋಷಿಸಿ ಸುಮ್ಮನಿದ್ದು
ಬಿಡುವ ನ್ಯಾಯಪೀಠಗಳೆ?
ಬಿರುಕುಬಿಟ್ಟ ಮಾನವೀಯತೆ
ಯ ಕರಟಿಹೋದ ಮೌಲ್ಯಗಳ
ಮರೆತೇ ಹೋದ ಕಾಡಿನಲಿ
ಸೌದೆ, ಹುಲ್ಲು, ಕುರಿಕಾಯಲೂ
ಹೊರಗಡಿಇಡುವುದನೂ
ಅಪರಾಧವೆಂದು ಘೋಷಿಸಿ
ಬಿಡಿರಯ್ಯ.
ಮೌನರೋಧನದಲಿ ಸತ್ತು
ಬದುಕುವ ಅಮ್ಮಂದಿರ
ಅಳುವ ಅಡಗಿಸಿ ಬಿಸಿಯುಸಿರ
ದಬ್ಬುವ ಅಪ್ಪಂದಿರ
ಪಾಪದ ಹೊರೆಯ ಹೊತ್ತು
ತಿರುಗುವ ಭುವಿಯ
ಮತ್ತೊಮ್ಮೆ ಮಗದೊಮ್ಮೆ
ಸಾಯಿಸದಿರಿ.
- ಫೆಲ್ಸಿ ಲೋಬೊ

Author
Felcy Lobo, Derebail
ಶೈಲಜಾ pidukoli
ವಾಸ್ತವ ಸತ್ಯವಿದೆ 👌
Reply